Saturday, 10 February 2018

ಗಜಲ್ -೮

ಭುವನೇಶ್ವರಿಯೆ ನಿನ್ನ ಕಂದ ನಾ ನೀನಿತ್ತ ನುಡಿಗಳಿಂದ ಪೂಜಿಸುವೆ
ನೀನಿತ್ತಿಹ ಅಕ್ಷರಗಳನೆ ಪೋಣಿಸಿ ಪದ ಮಾಲೆಗಳಿಂದ ಪೂಜಿಸುವೆ.

ಇದೋ ಕೃಷ್ಣೆ, ತುಂಗೆ, ಪ್ರಭೆಯರು; ಆ ಕಾಳಿ, ನೇತ್ರಾ ,ಕಾವೇರಿಯರು
ನಿನ್ನೊಳಾಡುತ ಹರಿವುದ ಕಂಡು ತಣಿದು ಕಾವ್ಯಗಳಿಂದ ಪೂಜಿಸುವೆ.

ಅದ್ಬುತ ಕಥನವು ನಿನ್ನ ಇತಿಹಾಸ,ಕಲೆಯ ವೈಭವಗಳ ನೆಲೆವೀಡು.
ವೀರರ, ಅರಸರ, ಸ್ವತಂತ್ರ ಕಲಿಗಳ ಸಾಹಸ ಕಥೆಗಳಿಂದ ಪೂಜಿಸುವೆ

ಗುರುಗಳ,ವಚನಕಾರರ,ದಾಸರು, ಕವಿ ಶ್ರೇಷ್ಠರು ಸೇವೆಗೈದಿಹರಿಲ್ಲಿ.
ಪುಣ್ಯಕ್ಷೇತ್ರಗಳ ಪಾವನೆ ನಿನ್ನನು ಸುಲೇಖನಗಳಿಂದ ಪೂಜಿಸುವೆ.

ಬಹುಜನುಮಗಳ ಪುಣ್ಯದ ಫಲವು ಈ ನಾಡಿನ ಮಗನಾಗಿ ಜನಿಸಿರುವೆ.
ನುಡಿಸೇವೆಯಲಿ ತ್ರಿನೇತ್ರಜನ ನೀ ಹರಸೆಂದು ಭಕ್ತಿಯಿಂದ ಪೂಜಿಸುವೆ.

✍🏼 ತ್ರಿನೇತ್ರಜ


ಶ್ರೀ ಶಿವಕುಮಾರ. ಹಿರೇಮಠ.
ಬಾಗಲಕೋಟೆ.
shivakumarh13 @gmail.com

No comments:

Post a Comment