Friday, 9 February 2018



      ಗಝಲ್--೪
ಅಚ್ಚಳಿಯದೆ ಉಳಿದ ನೆನಪಿನಂಗಳಕೆ ಮರಳಬೇಕೆಂಬ ಆಸೆ.
ಮಾಧ್ಯಮಗಳ ಗದ್ದಲವಿಲ್ಲದ ಕಾಲಕ್ಕೆ ಮತ್ತೆ ಸೇರಬೇಕೆಂಬ ಆಸೆ.

ಕಾಡ ಕಾಲದಾರಿಯಲಿ ಗೆಳೆಯರೊಂದಿಗೆ ಶಾಲೆಗ್ಹೋಗುವಾಗ ಆನಂದ
ಮರದ ಮರೆಯಿಂದ ಕೇಳಿದ್ದ ಕೋಗಿಲೆ ಇಂಚರ ಕೇಳಬೇಕೆಂಬ ಆಸೆ.

ಮುಂಜಾವ ಮಳೆಯ ಚಿಟಪಟ ನಾದ
ನೀಡುತ್ತಿತ್ತು ಆಹ್ಲಾದ
ಮನೆ ಹಿಂದಿನ ಮರದಲಿ ಹಕ್ಕಿಗಳ ಚಿಲಿಪಿಲಿ
ಕಿವಿತುಂಬಬೇಕೆಂಬ ಆಸೆ.

ಪಕ್ಕದೂರಿನ ಜಾತ್ರೆಗೆ ಹೋಗಿ ಕೇಳಿದ್ದ ಗದ್ದಲ ಇಂದಿಗೂ ರಿಂಗಣ
ನೆರೆಮನೆ ಕಂದನ ಕೈಗೆ ಆಟಿಕೆ ಇಟ್ಟಾಗ ಹಾಕಿದ ಕೇಕೆ ಕೇಳಬೇಕೆಂಬ ಆಸೆ.

ಬಾನುಲಿಯಲಿ ತೇಲಿಬರುತ್ತಿದ್ದ ಹಾಡುಗಳು,ಕೃಷಿರಂಗದ ಚಂದ
ಯುವವಾಣಿಯ ಆರಂಭಿಕ  ಸಂಗೀತ ಈಗೊಮ್ಮೆ ಆಲಿಸಬೇಕೆಂಬ ಆಸೆ

ಕಾಲ ಉರುಳಿ ಗಡ್ಡ-ಮೀಸೆಯು ನೆರೆತಿದೆ,ತ್ರಿನೇತ್ರಜನಿಗೆ
 ಬಾಲ್ಯಕೆ ಮರಳಿ ಜೋಗುಳ ಕೇಳುತ್ತ ನಿದ್ರೆಗೆ ಜಾರಬೇಕೆಂಬ ಆಸೆ.
........ ....... ...... ....... .....
✍..ತ್ರಿನೇತ್ರಜ
ಶಿವಕುಮಾರ. ಹಿರೇಮಠ.

No comments:

Post a Comment