Saturday, 24 February 2018

ಗಜಲ್  ೧೭

ಬದುಕು ಕ್ಷಣಿಕ ಕಾಮನಬಿಲ್ಲು ಕತ್ತಲಾದಾಗ ಬಣ್ಣಗಳೆಲ್ಲ ಮಾಯ
ಎಲ್ಲ ಮುಗಿದು ಹೋದಮೇಲೆ ಮಣ್ಣಾಗುವೆ ಭೋಗವೆಲ್ಲ ಮಾಯ

ಮೊಟ್ಟೆ ಇಟ್ಟು ಮರಿಗಳ ಬೆಳೆಸಲು ಗೂಡನು ಕಟ್ಟುವವು ಹಕ್ಕಿಗಳು
ಪುಕ್ಕ ಬಲಿತು ಮರಿ ಹಾರಿ ಹೋದಮೇಲೆ ಕಂಡ ಕನಸೆಲ್ಲ ಮಾಯ

ಬಯಕೆಗಳ ಬೀಜಬಿತ್ತಿ ಪ್ರೀತಿಯ ಹೊಲದೊಳು ಹಸಿ ಹಸಿರ ಬೆಳೆದೆ
ಅಕಾಲಿಕದಲಿ ಅತಿವೃಷ್ಟಿ ಸುರಿದು ಹೋದಮೇಲೆ ಫಲವೆಲ್ಲ ಮಾಯ

ಭೋರ್ಗರೆದು ಹರಿಯುತ್ತಿದ್ದ ಹರೆಯಕೆ ಕಟ್ಟೆಕಟ್ಟಿ ಕೂಡಿಕ್ಕಬಯಸಿದೆ
ವಯದ ತಾಪಕೆ ಭಾವನೆಗಳು ಬತ್ತಿ ಹೋದಮೇಲೆ ಆಸೆಯೆಲ್ಲ ಮಾಯ

ಮಿಥ್ಯ ಮೃತ್ಯುಲೋಕದೊಳು ತ್ರಿನೇತ್ರಜ ಅಮರನೆಂದು ಮೆರೆದಾಯ್ತು
ವ್ಯಾಮೂಹವು ಅಳಿದು ಹೋದಮೇಲೆ ತುಂಬಿದ್ದ ಗರ್ವವೆಲ್ಲ ಮಾಯ

✍🏼  ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.

No comments:

Post a Comment