Wednesday, 21 March 2018

ಗಝಲ್-೨೩

ಬಾಡದ ಹೂಗಳ ತಂದು ನಿನ್ನ ಮುಡಿಗೇರಿಸುವುದು ನನ್ನ ಕನಸಾಗಿತ್ತು ಘಾತಕಿ
ಮೋಡಗಳ ಎಳೆದು ತಂದು ನಿನಗುಡಿಸುವುದು ನನ್ನ ಕನಸಾಗಿತ್ತು ಘಾತಕಿ

ಕನಸುಗಳ ಕೊಂದು ಚಿತೆಗೇರಿಸಿ ಕ್ರೂರ ಮಗುಳ್ನಗೆಯಿಡನೆ ಮರೆಯಾದೆಯಲ್ಲ
ರೋಮಿಯೋ,ಷಹಜಹಾನರ ಮೀರಿಸಬೇಕೆಂಬುದು ನನ್ನ ಕನಸಾಗಿತ್ತು ಘಾತಕಿ

ಹೃದಯವನ್ನು ಮಾಂಸದ ಮುದ್ದೆ ಎಂದು ಭಾವನೆಗಳ ಮಾನ ತೆಗೆದೆಯಲ್ಲ
ಪ್ರೇಮಪುಟದೊಳು ನಮ್ಮದೊಂದು ಭಾವಗೀತೆ ಬರೆವುದು ನನ್ನ ಕನಸಾಗಿತ್ತು ಘಾತಕಿ

ನಿನ್ನ ಬಯಸಿದ ತಪ್ಪಿಗೆ ‌ನನ್ನ ಬದುಕು ಸೂತ್ರ ಹರಿದ ಗಾಳಿಪಟವಾಯಿತು
ಒಲವಿನಂಬರದಲಿ ನಿನ್ನ ಕೈಹಿಡಿದು ತೇಲುವುದು ನನ್ನ ಕನಸಾಗಿತ್ತು ಘಾತಕಿ

ತ್ರಿನೇತ್ರಜನ ಕಣ್ಣಿಂದ ನೆತ್ತರನೇ ಸುರಿಸಿ ಕಣ್ಣೆತ್ತಿ ನೋಡದೆ ಹೊರಟು ಹೋದೆಯಲ್ಲ
ರೆಪ್ಪೆಯಾಗಿ ನಿನ್ನನ್ನು ಕಣ್ಣಲ್ಲಿ ಜತನಮಾಡುವುದು ನನ್ನ ಕನಸಾಗಿತ್ತು ಘಾತಕಿ
********************
✍🏼 ತ್ರಿನೇತ್ರಜ್

 ಶಿವಕುಮಾರ ಹಿರೇಮಠ

Tuesday, 20 March 2018

ಗಝಲ್-೨೨

ನರಮನ್ಸಾ ಶಾನೆ ಬೆಳ್ಕೊಂಡ್ಬಿಟ್ಟೆ ಪಾಪಿ , ಹದ್ಮೀರಿದ್ ನಿನ್ ದುಷ್ಟ್ಬುದ್ದಿಗೆಂದೂ ಕೊನೆಯಿಲ್ಲ
ಪರಪಂಚಾನೆ ಹಾಳಾಗ್ಹೊ ದ್ರು ಯೊಚ್ನೆ ಗೀಚ್ನೆ ಯಾವ್ದುಇಲ್ಲ ,ನಿನ್ ಹುಚ್ಚಾಟಕ್ಕೆಂದೂ ಕೊನೆಯಿಲ್ಲ

ಹುಯ್ಯೋ ಮಳೆನೀರೆಲ್ಲಾ ಸೇರ್ಕೊಂಡ ತಗ್ಗಿಗ್ಹರಿಯೋದ ನಿಯಮ,ಇನ್ನೇನ್ ದಿನ್ನೆ ಹತ್ತತ್ತಾ.
ಕೆರೆಗಳ್ನುಂಗಿ ಮನೆ ಕಟ್ಕೊಂಡೆ, ನೀರ್ನುಗ್ಗಿದ್ಕೆ ಬಾಯ್ ಬಡ್ಕಳ್ಳೊ ನಾಟ್ಕಕ್ಕೆಂದೂ ಕೊನೆಯಿಲ್ಲ.

ಮರಗಳ್ನೆಲ್ಲ ಕಡ್ದಹಾಕ್ಬಿಟ್ಟೆ,ಕಾಡಿದ್ರೇನೆ ಮಳೆ ಸುರಿಯೋದು, ಇನ್ನೇನ್ ನಿನ್ ಮುಸುಡಿ ನೋಡ್ಕೊಂಡಾ
ಭೂಮಿ ಬಗ್ದು ನೀರ್ ತೆಗ್ದಾಯ್ತು ,ಕುಡಿಯೋ ನೀರ್ಗೆ ಬಡದಾಡ್ಕೊಳ್ಳೊ ದುರ್ಗತಿಗೆಂದೂ ಕೊನೆಯಿಲ್ಲ

ಕಷ್ಟಪಟ್ಟು ಸ್ವತಂತ್ರ ತಂದಿದ್ ಈ ದೇಶ ಬೇಳಸ್ಬೇಕಂತಾ, ಇನ್ನೇನ್ ಬಡವರ್ನ ಸುಲಿಯೋಕಂತಾನಾ.
ಬದುಕೊಕ್ ಲಂಚ ಸತ್ತ್ರೂ ಲಂಚ ,ದೇವ್ರ ದರ್ಷ್ನನೂ ಕಷ್ಟಾಗೋಯ್ತು ಬ್ರಷ್ಟಾಚಾರಕೆಂದೂ ಕೊನೆಯಿಲ್ಲ

ತ್ರಿನೇತ್ರಜ ಇಷ್ಟೆಲ್ಲ ಅಕ್ಷ್ರ ಗೀಚೋದು ವಸಿ ಎಚ್ರ ಮೂಡ್ಲಿ ಅಂತಾ, ಇನ್ನೆನ್ ಕೆಲ್ಸ ಇಲ್ಲಂತಾನಾ.
ಇರೊಳೊಬ್ಳೆ ಭೂಮ್ತಾಯಿ, ನಾಶಕ್ಮೊದ್ಲೆ ಎಚ್ಚೆತ್ಗೊಂಡ್ರೆ ನನ್ ಸಂತೋಷಕ್ಕೆಂದೂ ಕೊನೆಯಿಲ್ಲ.
----------------------
✍🏼 ತ್ರಿನೇತ್ರಜ್

 ಶಿವಕುಮಾರ. ಹಿರೇಮಠ.
ಗಝಲ್- ೨೧
(ಕಾಫಿಯಾನಾ)

ಎದೆಯಲ್ಲಿ ಕೆಂಡಗಳ ರಾಶಿ ಉರಿದರೂ ನಗುನಗುತಲಿ ಸಹಿಸಿಕೊಂಡೆ
ಪ್ರೀತಿ ಹುಡುಕುವ ಭರದಲ್ಲಿ ಮುಗ್ದ ಮನಸ್ಸಿನ ಶಾಂತಿ ಕಳೆದುಕೊಂಡೆ

ಹೃದಯದ ತುಂಬ ಚಿತ್ರ ಬಿಡಿಸಿ ಅಳಿಸಲಾರದೆ ಹಾಗೇ ಹೋದಳು
ಬೇಸರಿಸದೆ ಆಗಾಗ ನೆನಪಿನ ಕಳೇಬರದೊಡನೆ ಮಾತಾಡಿಕೊಂಡೆ

ಒಲವಿನ ಫಲ ಪಕ್ವವಾಗುವ ಮುನ್ನವೇ ಚಂದದ ಚೂರಿಯಿಟ್ಟಳು
ಮದ್ದ ನೀಡುವವರಾರಿಲ್ಲದೆ ನನಗೆ ನಾನೇ ಉಪ್ಪು ಸವರಿಕೊಂಡೆ

ವಿರಹಕ್ಕಿರುವ ಕವಲು ನೂರಾದರೂ ಎಲ್ಲದಕೂ ಹಾಳು ಮನಸೇ ಬೇರು
ಕತ್ತರಿಸಿದರೂ ಚಿಗುರೊಡೆವವು, ಬೇರನು ಕೀಳಲಾಗದೆಂದರಿತುಕೊಂಡೆ

ತ್ರಿನೇತ್ರಜನ ಎದೆಯ ಗುಡಿಸಲಲಿ ಬೆಚ್ಚಗಿರದೆ ನಿರ್ಲಕ್ಷಿಸಿ ಹೋದಳು
ಹೃದಯ ಸಿರಿತನವ ಅರಿಯದ ಅವಳ ಪೆದ್ದುತನಕೆ ಮರುಗಿಕೊಂಡೆ
...... ..... ...... ...... ....... ........ ........
✍🏼 ತ್ರಿನೇತ್ರಜ್.
19/03, 3:50 p.m
 (ಶಿವಕುಮಾರ ಹಿರೇಮಠ)


 *ಗಝಲ್ ೨೦*

ಎಷ್ಟು ಸಾರೆ ಯತ್ನಿಸಿದರು ಅವಳ ಅರ್ಥೈಸಲಾಗದೆ ನಾ ಸೋತೆ
ಎಂಥ ಶಕ್ತಿ ಇದ್ದರೂ ಅವಳ ಅಂತಃಶಕ್ತಿಯರಿಯದೆ ನಾ ಸೋತೆ

ಮುಸುರೆ ತಿಕ್ಕಿ ಬಟ್ಟೆ ತೊಳೆವ ಆ ಹಸ್ತಗಳಿಗೆ ಬೇಸರವೆಂಬುದಿಲ್ಲ
ಒರಟು ಕೈಗಳ ನೋಡದರೂ ಅವುಗಳ ಶ್ರಮವರಿಯದೆ ನಾ ಸೋತೆ

ಎದೆಯಲೆದ್ದ ಬಿಸಿಗೆ ದೇಹವದು ಕಾದು ಬೆಂಡಾಗಿ ಪ್ರಕೃತಿಯಾದಳು
ಜೀವತೆಗೆವ ನೋವಲ್ಲೂ ಜನ್ಮವೀವ ತಾಳ್ಮೆಯರಿಯದೆ ನಾ ಸೋತೆ

ಕಟ್ಟಿದ ಮೂರು ಬಂಧದಲ್ಲಿ ಬಂದ ಅಪರಿಚಿತ ಸಂಬಂಧ ಬೆಸೆದಳು
ಅವಳು ಎಂದರೆ ಬರಿ ಮಾನುಷಿಯಲ್ಲ ಎಂಬುದನರಿಯದೆ ನಾ ಸೋತೆ

ಎಲ್ಲವನ್ನೂ ತನ್ನೋಳಗಿರಿಸಿಕೊಂಡವಳೆದಿರು ತ್ರಿನೇತ್ರಜ ಎನೇನೂ ಅಲ್ಲ
ಅಂದವ ಮಾತ್ರ ಅಳೆದಳೆದು ಚಂದದ ಹೃದಯವರಿಯದೇ ನಾ ಸೋತೆ

✍🏼 ತ್ರಿನೇತ್ರಜ್
[10/03, 10:02 p.m.]
 ಶಿವಕುಮಾರ. ಹಿರೇಮಠ

Saturday, 3 March 2018

*ಗಝಲ್-- ೧೯*

ಜೀವನದ ಪ್ರತಿದಿನದ ಪಾಠಗಳಿಗೆ ಮನ ತೆರೆದ ಬಾಗಿಲಾಗಿರಲಿ|
ತ್ರಿನೇತ್ರಜ ಹಂಚಿಹ ಹದುಳದರಿವಿಗೆ ಮನ ತೆರೆದ ಬಾಗಿಲಾಗಿರಲಿ||

ಬದುಕು ಆಳ ತಿಳಿಯದ ಸಾಗರವಲ್ಲದೆ ಮಿತಿಯುಳ್ಳ ಬಾವಿಯಲ್ಲ|
ಅವಿರಿವರು ಕಂಡ ಅನುಭವಗಳಿಗೆ ಮನ ತೆರೆದ ಬಾಗಿಲಾಗಿರಲಿ||

ಎಲ್ಲ ಬಲ್ಲೆನೆಂಬುವ ತಪ್ಪು ಕಲ್ಪನೆಯು ನೇಣ ಕುಣಿಕೆಯೋ ಕಲಿಕೆಗೆ|
ದಿಕ್ಕು ದಿಕ್ಕಿನಿಂದ ದಕ್ಕುವ ಜ್ಞಾನಗಳಿಗೆ ಮನ ತೆರೆದ ಬಾಗಿಲಾಗಿರಲಿ||

ನೋವನು ಉಚಿತ ನೀಡೋ ಮಾಯೆಯ ಸಂತೆಯೋ ಈ ಬದುಕು|
ದೀನ ಅಬಲರ ನೋವಿನ ತುಣುಕಳಿಗೆ ಮನ ತೆರೆದ ಬಾಗಿಲಾಗಿರಲಿ||

ದ್ವೇಷದ ಹೊಗೆಯಲೇ ಬೆಂಕಿಹಚ್ಚಲು ನೂರ್ಕಾಲ ಸಮಯವುಳಿದಿಲ್ಲ|
ನೆಮ್ಮದಿಗಾಗಿ ಮೂರ್ಕಾಲವೂ ಕ್ಷಮೆಗೆ ಮನ ತೆರೆದ ಬಾಗಿಲಾಗಿರಲಿ||
*******************
✍🏼 ತ್ರಿನೇತ್ರಜ್

ಶಿವಕುಮಾರ ಹಿರೇಮಠ