Wednesday, 14 February 2018

ಗಝಲ್-14

[13/02, 12:58 p.m.]
ಶಿಷ್ಟಾಚಾರದ ದೀಪ್ತಿಯಾಗಿ ಜಗಕೆ ಮಾದರಿಯಾಗಿದ್ದೆ ಭಾರತ
ಭ್ರಷ್ಟಾಚಾರದ ನೃತ್ಯಕ್ಕೆ ಮಣಿದು ಸ್ವಾರ್ಥಿಗಳ ಸೊತ್ತಾದೆ ಭಾರತ

ಪರರ ದಬ್ಬಾಳಿಕೆಯಲ್ಲೂ ನಿನ್ನತನವ ಮಾರಲಿಲ್ಲ ಬಲವಾಗಿದ್ದೆ
ಸ್ವತಂತ್ರದ ಕಳೆಯಲ್ಲೂ ಸುಸಂಸ್ಕೃತಿ ಮಾಯವಾಗುತಿದೆ ಭಾರತ

ಅಭಿವೃದ್ಧಿಯ ಓಟ,ರಾಜಕೀಯದ ಹುಚ್ಚಾಟ,ಕಾಳಧನದ ಚೆಲ್ಲಾಟ
ಎಪ್ಪತ್ತಾದರೂ ದೀನ ದಲಿತರು ಬಲಿತರಾಗದ ಕ್ಷಾಮವಿದೆ ಭಾರತ

ಮನೆಯವರೊಟ್ಟಿಗೆ ಸಡಗರದಿಂದಾಚರಿಸೋ ಹಬ್ಬಗಳನಿತ್ತೆ
ಹೆತ್ತವರ ಕಣ್ತಪ್ಪಿಸಿ ಪ್ರೇಮಿಗಳ ದಿನ ಆಚರಿಸಲಾಗುತ್ತಿದೆ ಭಾರತ

ಅಂತಃಕರಣ ಮನುಷ್ಯತ್ವ ನೀತಿ ನಿಯಮಗಳ ಸ್ಪೂರ್ತಿಯಾಗಿದ್ದೆ
ನಿರ್ಲಜ್ಜ ಕಾಮಪಿಪಾಸುಗಳ ಧರ್ಮಾಂಧರ ಸಂತೆಯಾದೆ ಭಾರತ

ಬಸವ ಮೋಹನ ಭೀಮರು ಬೆಳಗಿ ದಾರಿತೋರಿ ಅಸ್ತರಾದರು
ದಾರಿಬಿಟ್ಟವರಿಗೆ ಚಿತ್ರ ಪ್ರತಿಮೆಗಳೇ ಬಂಡವಾಳವಾಗಿದೆ ಭಾರತ

ಗರುಭ್ಯೋ ನಮಃ ಎಂದು ತ್ರಿನೇತ್ರಜ ಜ್ಞಾನಕ್ಕೆ ಗಮನ ತೋರಿದ್ದ
ಅಧಿಕಾರಕ್ಕೆ ಡೊಗ್ಗುಸಲಾಮಿಕ್ಕುವವರ ಸೋಗಿಗೆ ಪೆಚ್ಚಾದೆ ಭಾರತ

✍🏼 ತ್ರಿನೇತ್ರಜ

 ಶಿವಕುಮಾರ‌. ಹಿರೇಮಠ.

No comments:

Post a Comment