Tuesday, 20 March 2018

ಗಝಲ್- ೨೧
(ಕಾಫಿಯಾನಾ)

ಎದೆಯಲ್ಲಿ ಕೆಂಡಗಳ ರಾಶಿ ಉರಿದರೂ ನಗುನಗುತಲಿ ಸಹಿಸಿಕೊಂಡೆ
ಪ್ರೀತಿ ಹುಡುಕುವ ಭರದಲ್ಲಿ ಮುಗ್ದ ಮನಸ್ಸಿನ ಶಾಂತಿ ಕಳೆದುಕೊಂಡೆ

ಹೃದಯದ ತುಂಬ ಚಿತ್ರ ಬಿಡಿಸಿ ಅಳಿಸಲಾರದೆ ಹಾಗೇ ಹೋದಳು
ಬೇಸರಿಸದೆ ಆಗಾಗ ನೆನಪಿನ ಕಳೇಬರದೊಡನೆ ಮಾತಾಡಿಕೊಂಡೆ

ಒಲವಿನ ಫಲ ಪಕ್ವವಾಗುವ ಮುನ್ನವೇ ಚಂದದ ಚೂರಿಯಿಟ್ಟಳು
ಮದ್ದ ನೀಡುವವರಾರಿಲ್ಲದೆ ನನಗೆ ನಾನೇ ಉಪ್ಪು ಸವರಿಕೊಂಡೆ

ವಿರಹಕ್ಕಿರುವ ಕವಲು ನೂರಾದರೂ ಎಲ್ಲದಕೂ ಹಾಳು ಮನಸೇ ಬೇರು
ಕತ್ತರಿಸಿದರೂ ಚಿಗುರೊಡೆವವು, ಬೇರನು ಕೀಳಲಾಗದೆಂದರಿತುಕೊಂಡೆ

ತ್ರಿನೇತ್ರಜನ ಎದೆಯ ಗುಡಿಸಲಲಿ ಬೆಚ್ಚಗಿರದೆ ನಿರ್ಲಕ್ಷಿಸಿ ಹೋದಳು
ಹೃದಯ ಸಿರಿತನವ ಅರಿಯದ ಅವಳ ಪೆದ್ದುತನಕೆ ಮರುಗಿಕೊಂಡೆ
...... ..... ...... ...... ....... ........ ........
✍🏼 ತ್ರಿನೇತ್ರಜ್.
19/03, 3:50 p.m
 (ಶಿವಕುಮಾರ ಹಿರೇಮಠ)

No comments:

Post a Comment